ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಎಲ್ಪಿಜಿ ಬಿಕ್ಕಟ್ಟು ಹೆಚ್ಚುತ್ತಿರುವ ಹೊತ್ತಿನಲ್ಲಿ, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗ್ಯಾಸ್ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಚಿನಗಂಟ್ಯಾಡ ಪ್ರದೇಶದಲ್ಲಿರುವ ಮಣಿಕಂಠ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್ ಯಾ. ಅಪ್ಪಾ ರಾವ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದ ಅಪ್ಪಾ ರಾವ್, ಗ್ರಾಹಕರ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ನೆಪದಲ್ಲಿ ಒಟಿಪಿಗಳನ್ನು ಸಂಗ್ರಹಿಸಿ, ನಂತರ ಸಿಲಿಂಡರ್ಗಳನ್ನು ತಲುಪಿಸದೇ ವಂಚನೆ ಮಾಡಿದ್ದಾನೆ ಎಂಬುದು ಆರೋಪ. ಆದರೆ, ಏಜೆನ್ಸಿ ದಾಖಲೆಗಳಲ್ಲಿ ಸಿಲಿಂಡರ್ಗಳು ಈಗಾಗಲೇ ಡೆಲಿವರಿ ಆಗಿವೆ ಎಂದು ನಮೂದಿಸಲಾಗಿತ್ತು. ಇದರಿಂದ ಅನುಮಾನಗೊಂಡ ಗ್ರಾಹಕರು ಏಜೆನ್ಸಿಯನ್ನು ಸಂಪರ್ಕಿಸಿದಾಗ, ಈ ವಂಚನೆ ಬಹಿರಂಗವಾಗಿದೆ.
ಈ ನಡುವೆ ಆರೋಪಿಯು ಕಾಣೆಯಾಗಿದ್ದು, ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಗಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ದೂರಿನ ಪ್ರಕಾರ, ಸುಮಾರು 30 ಗ್ಯಾಸ್ ಸಿಲಿಂಡರ್ಗಳನ್ನು ತೆಗೆದುಕೊಂಡು ಪರಾರಿಯಾಗಿರುವುದರ ಜೊತೆಗೆ, 13 ಸಾವಿರ ರೂಪಾಯಿ ಹಣವನ್ನು ಕೂಡ ಠೇವಣಿ ಮಾಡಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆ ಗ್ರಾಹಕರು ಒಟಿಪಿಗಳನ್ನು ಹಂಚಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬುದನ್ನು ಸ್ಪಷ್ಟಪಡಿಸಿದೆ. ವಿಶೇಷವಾಗಿ ಹೆಚ್ಚಿನ ಬೇಡಿಕೆಯ ಸಮಯದಲ್ಲಿ ವಿತರಣಾ ಸಿಬ್ಬಂದಿಯ ಮೇಲೆ ಸಂಪೂರ್ಣ ನಂಬಿಕೆ ಇಡುವ ಮುನ್ನ ಜಾಗರೂಕರಾಗಿರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.