ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿದ್ದ 16 ವರ್ಷದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದನ ಎಂಬಾಕೆ ಮುಳ್ಳಯ್ಯನಗಿರಿ ಸಮೀಪದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಾಪತ್ತೆಯಾಗಿದ್ದಾಳೆ. ಮಂಗಳವಾರ ಸಂಜೆ ಸುಮಾರು 6:30ರ ವೇಳೆಗೆ ಪ್ರಕೃತಿ ಸೌಂದರ್ಯ ವೀಕ್ಷಿಸಲು ತೆರಳಿದ್ದಾಗ, ದಟ್ಟವಾದ ಕತ್ತಲೆ ಮತ್ತು ಮಂಜಿನ ಕಾರಣದಿಂದ ಬಾಲಕಿ ದಾರಿ ತಪ್ಪಿ ಗುಂಪಿನಿಂದ ಬೇರ್ಪಟ್ಟಿದ್ದಾಳೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರಾದರೂ, ಹವಾಮಾನ ವೈಪರೀತ್ಯ ಹಾಗೂ ಕತ್ತಲೆಯ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಬುಧವಾರ ಬೆಳಿಗ್ಗೆಯಿಂದಲೇ ಶೋಧ ಕಾರ್ಯ ತೀವ್ರಗೊಂಡಿದ್ದು, 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ವಿವಿಧ ಇಲಾಖೆಗಳ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಅರಣ್ಯ ಇಲಾಖೆಯು ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಬೆಟ್ಟದ ಕಂದಕ ಹಾಗೂ ದಟ್ಟ ಅಡವಿಗಳಲ್ಲಿ ಬಾಲಕಿಗಾಗಿ ಹುಡುಕಾಟ ನಡೆಸುತ್ತಿದೆ. ಎಎಸ್ಪಿ ಜಯಕುಮಾರ್ ಅವರು ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದು, ಬಾಲಕಿ ಹೋಗಿರಬಹುದಾದ ಸಂಭವನೀಯ ಮಾರ್ಗಗಳಲ್ಲಿ ಶೋಧ ಮುಂದುವರಿದಿದೆ. ಈ ಘಟನೆಯು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.