ರಾಜ್ಯದ ವಾಹನ ಸವಾರರಿಗೆ ದೊಡ್ಡ ರಿಲೀಫ್ - ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್, ಅಂದರೆ HSRP ನಂಬರ್ ಪ್ಲೇಟ್ ಕಡ್ಡಾಯ ನಿಯಮವನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ HSRP ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಜಾರಿಯಾಗದೆ ವಿಫಲವಾಗಿದೆ.
ವಾಹನಗಳ ಭದ್ರತೆ ಹೆಚ್ಚಿಸುವುದು ಹಾಗೂ ವಂಚನೆ, ಅಪರಾಧ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿತ್ತು. ಆದರೆ, ವಾಹನ ಸವಾರರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಸಾರಿಗೆ ಇಲಾಖೆ ಎಂಟು ಬಾರಿ ಗಡುವು ವಿಸ್ತರಿಸಿದರೂ, ಹೆಚ್ಚಿನವರು HSRP ಅಳವಡಿಕೆಗೆ ಮುಂದಾಗಿಲ್ಲ. ರಾಜ್ಯದಲ್ಲಿನ ಸುಮಾರು 2 ಕೋಟಿ ಹಳೆಯ ವಾಹನಗಳಲ್ಲಿ ಕೇವಲ 59 ಲಕ್ಷ ವಾಹನಗಳು ಮಾತ್ರ HSRP ಅಳವಡಿಸಿಕೊಂಡಿವೆ. ಇನ್ನೂ 1.41 ಕೋಟಿ ವಾಹನಗಳು ಈ ನಿಯಮ ಪಾಲಿಸದೇ ಉಳಿದಿವೆ.
ಯೋಜನೆ ಜಾರಿಗೆ ಸಂಬಂಧಿಸಿದ ಗೊಂದಲಗಳು ಹಾಗೂ ಪದೇಪದೇ ಗಡುವು ವಿಸ್ತರಣೆ ಕಾರಣಗಳಿಂದ ಸಾರ್ವಜನಿಕರಲ್ಲಿ ನಿರಾಸಕ್ತಿ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಎರಡು ವರ್ಷಗಳ ಕಾಲ ನಡೆದ ಪ್ರಯತ್ನಕ್ಕೂ ಫಲ ಸಿಗದೇ ಯೋಜನೆ ವಿಫಲವಾಗಿದೆ. ಬೇರೆ ರಾಜ್ಯಗಳಲ್ಲಿ ಯಶಸ್ವಿಯಾಗಿದ್ದ HSRP ಯೋಜನೆ ಕರ್ನಾಟಕದಲ್ಲಿ ಮಾತ್ರ ಫ್ಲಾಪ್ ಆಗಿದ್ದು, ಇದೀಗ ಸಾರಿಗೆ ಇಲಾಖೆ ತನ್ನ ಆದೇಶವನ್ನು ಹಿಂಪಡೆದಿದೆ. ಇದನ್ನು ವಾಹನ ಸವಾರರ ಗೆಲುವು, ಇಲಾಖೆಯ ಸೋಲು ಎಂದು ವಿಶ್ಲೇಷಿಸಲಾಗುತ್ತಿದೆ.