ರಾಜ್ಯ ರಾಜಕಾರಣದಲ್ಲಿ 'ಸಾಲದ ಸರ್ಕಾರ' ಎಂಬ ಬಿಜೆಪಿಯ ಟೀಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರದ ಸಾಲದ ಪ್ರಮಾಣ ಮತ್ತು ಈಡೇರದ ಭರವಸೆಗಳನ್ನು ಮುಂದಿಟ್ಟುಕೊಂಡು ಕಮಲ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರವನ್ನು ಟೀಕಿಸುವ ಮೊದಲು ನರೇಂದ್ರ ಮೋದಿ ಸರ್ಕಾರ ಎಷ್ಟು ಸಾಲ ಮಾಡಿದೆ ಎಂಬುದನ್ನು ಬಿಜೆಪಿ ನಾಯಕರು ನೋಡಲಿ ಎಂದು ಕಿಡಿಕಾರಿದರು. "ಮೋದಿ ಅವರು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಅಂದಿದ್ದರು, ಅದು ಎಲ್ಲಿ ಹೋಯಿತು? ಯಾರಿಗಾದರೂ ಅಚ್ಚೇ ದಿನ್ ಬಂದಿದೆಯೇ?" ಎಂದು ವ್ಯಂಗ್ಯಮಾಡಿದರು.
ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ, ಉಚಿತ ವಿದ್ಯುತ್ ಮತ್ತು ಅಕ್ಕಿ ನೀಡುವ ಮೂಲಕ ಜನರ ಕೈಗೆ ಹಣ ನೀಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಜನರ ಮೇಲೆ ನಿಜವಾದ ಕಾಳಜಿ ಇದ್ದರೆ, ಪ್ರತಿ ತಿಂಗಳು ಜನರ ಖಾತೆಗೆ 10,000 ರೂಪಾಯಿ ಆರ್ಥಿಕ ನೆರವು ನೀಡಲಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು. ಅಯೋಧ್ಯೆಯ ಅಕ್ಷತೆಯನ್ನು ಮನೆಮನೆಗೆ ತಲುಪಿಸಿದ ರೀತಿಯಲ್ಲಿ, ಕಡಿಮೆ ಬೆಲೆಗೆ ಎಲ್ಪಿಜಿ ಸಿಲಿಂಡರ್ಗಳನ್ನು ಯಾಕೆ ತಲುಪಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿದ ಅವರು, "ಸರ್ಕಾರ ಕೇವಲ ನನ್ನಿಂದ ಅಥವಾ ಸಿದ್ದರಾಮಯ್ಯ ಅವರಿಂದ ನಡೆಯುತ್ತಿಲ್ಲ. ನಾವಿಬ್ಬರು ಒಟ್ಟಾಗಿ ಶ್ರಮಿಸಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೇವೆ. ನಮ್ಮದು ನೀತಿಯ ಮೇಲಿನ ರಾಜಕಾರಣವೇ ಹೊರತು ಜಾತಿ ಅಥವಾ ಧರ್ಮದ ಮೇಲಲ್ಲ" ಎಂದು ಸ್ಪಷ್ಟಪಡಿಸಿದರು. ಮುಂಬರುವ ಉಪಚುನಾವಣೆಯಲ್ಲೂ ಪಕ್ಷದ ಕಾರ್ಯಕರ್ತರು ಮತ್ತು ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಚುನಾವಣಾ ಸಮರ ಹತ್ತಿರವಾಗುತ್ತಿದ್ದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಈ 'ಸಾಲ' ಮತ್ತು 'ಗ್ಯಾರಂಟಿ' ಸಂಘರ್ಷ ಮತ್ತಷ್ಟು ಕಾವೇರುವ ಸಾಧ್ಯತೆ ಇದೆ.