ಶಿವಮೊಗ್ಗದ ಹುಲಿಕಲ್ ಘಾಟಿಯ ಹೇರ್ಪಿನ್ ಕ್ರಾಸ್ ಬಳಿ ಕಾಂಕ್ರೀಟ್ ತಡೆಗೋಡೆ ದುರಸ್ತಿ ಕಾರ್ಯ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಭೂಕುಸಿತ ಸಂಭವಿಸಿದೆ. ಈ ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರು ದುರದೃಷ್ಟವಶಾತ್ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಶಬ್ಬೀರ್ (40) ಎಂಬುವವರ ಮೃತದೇಹ ಪತ್ತೆಯಾಗುವುದರೊಂದಿಗೆ, ನಾಪತ್ತೆಯಾಗಿದ್ದ ಮೂವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ.
ಇದಕ್ಕೂ ಮೊದಲು ಏಪ್ರಿಲ್ 9 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಕಾಮಗಾರಿ ಮೇಲ್ವಿಚಾರಕ ರಾಘು (37) ಮತ್ತು ಹಾವೇರಿ ಜಿಲ್ಲೆಯ ರಾಜು (30) ಎಂಬುವವರ ಮೃತದೇಹಗಳು ಪತ್ತೆಯಾಗಿದ್ದವು. ಪತ್ತೆಯಾದ ಎಲ್ಲಾ ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ದುರಂತದಲ್ಲಿ ಇತರ ಮೂವರು ಕಾರ್ಮಿಕರು ಗಾಯಗೊಂಡಿದ್ದು, ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳದಲ್ಲಿ ಎಸ್ಡಿಆರ್ಎಫ್ (SDRF), ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಹಗಲಿರುಳು ನಡೆಸುತ್ತಿದ್ದ ಸುದೀರ್ಘ ರಕ್ಷಣಾ ಕಾರ್ಯಚರಣೆಯು ಎಲ್ಲಾ ಮೃತದೇಹಗಳ ಪತ್ತೆಯೊಂದಿಗೆ ಮುಕ್ತಾಯಗೊಂಡಿದೆ. ಸದ್ಯ ಘಾಟ್ ಪ್ರದೇಶದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ.