ತಮಿಳುನಾಡಿನಲ್ಲಿ ನಟ, ಟಿವಿಕೆ ಅಧ್ಯಕ್ಷ ವಿಜಯ್ ಅವರ ಕಾರನ್ನು ಹಿಂಬಾಲಿಸಿದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ತಂಜಾವೂರು ಜಿಲ್ಲೆಯ ಚೆಂಗಿಪಟ್ಟಿ ಎಂಬಲ್ಲಿ ವಿಜಯ್ ಅವರ ಚುನಾವಣಾ ಸಭೆ ನಡೆಯಿತು. ಈ ಸಭೆಗೆ ಅವರು ಚೆನ್ನೈಯಿಂದ ತಿರುಚಿಗೆ ವಿಮಾನದಲ್ಲಿ ಬಂದು ಅಲ್ಲಿಂದ ಕಾರಿನಲ್ಲಿ ಚೆಂಗಿಪಟ್ಟಿಗೆ ಹೋದರು. ವಿಜಯ್ ಅವರನ್ನು ಹತ್ತಿರದಿಂದ ನೋಡಲು ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೈಕ್ಗಳಲ್ಲಿ ಹಿಂಬಾಲಿಸಿದ್ದರು. ಈ ವೇಳೆ ಹಲವು ಕಡೆ ಅಪಘಾತಗಳು ಸಂಭವಿಸಿವೆ.
ತಂಜಾವೂರು ಜಿಲ್ಲೆಯ ವಳಂಬಕ್ಕುಡಿ ಬಳಿ ನಿಂತಿದ್ದ ಪೊಲೀಸರ ವಾಹನಕ್ಕೆ ಬೈಕ್ನಲ್ಲಿ ಬಂದ ಯುವಕರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದೇ ರೀತಿ ಸಭೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾಗ ವಲ್ಲಂ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ದುರ್ಗಾ, ಕಲೈ ಮಣಿ, ಎಂಬ ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ ತಂಜಾವೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.