ಒಟ್ಟಾವಾ: ಮಾರ್ಚ್ 14 ರಂದು ಕೆನಡಾದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಹಲ್ಲೆಗೊಳಗಾಗಿದ್ದ ಭಾರತೀಯ ಸಿಖ್ ವಿದ್ಯಾರ್ಥಿ ಇದೀಗ ಸಾವನ್ನಪ್ಪಿದ್ದಾನೆ. ಮೃತ ಸಿಖ್ ವಿದ್ಯಾರ್ಥಿಯನ್ನು 26 ವರ್ಷದ ಗುರ್ಕಿರತ್ ಮನೋಚಾ ಎಂದು ಗುರುತಿಸಲಾಗಿದೆ. ಆತ ಉಜ್ಜಯಿನಿಯವರಾಗಿದ್ದು, ಕೆನಡಾದ ಬ್ರಿಟಿಷ್ ಕೊಲಂಬಿಯಾದ ನಾರ್ದನ್್ರ ಲೈಟ್ಸ್ ಕಾಲೇಜಿನಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನ ನಡೆಸುತ್ತಿದ್ದರು. ಗುರ್ಕಿರತ್ ಸುಮಾರು 15 ತಿಂಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ಹೋಗಿದ್ದರು. ಅವರ ಕುಟುಂಬ ಉಜ್ಜಯಿನಿಯ ಪಾರ್ಶ್ವನಾಥ್ ಕಾಲೋನಿಯಲ್ಲಿ ವಾಸಿವಿದೆ.
ಮಾರ್ಚ್ 14 ರಂದು, ಕಾಲೇಜು ವಿದ್ಯಾರ್ಥಿಗಳ ನಡುವೆ ಉಂಟಾದ ವಿವಾದದ ನಂತರ, ಚಾರ್ಲಿ ಕೆರೆಯ ಬಳಿ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಇದರಿಂದಾಗಿ ಗುರ್ಕಿರತ್ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಅವರ ಕುಟುಂಬ ತಿಳಿಸಿದೆ. ಆದರೆ ಗಲಾಟೆಯ ವಿವರ ಇನ್ನೂ ಸ್ಪಷ್ಟವಾಗಿಲ್ಲ.
ಈ ಪ್ರಕರಣವನ್ನು ಪ್ರಸ್ತುತ ಕೆನಡಾದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಘಟನೆಯ ಕಾರಣ ಮತ್ತು ಇತರ ವಿವರಗಳು ಸ್ಪಷ್ಟವಾಗಲಿದೆ ಎಂದು ಗುರ್ಕಿರತ್ ಅವರ ತಂದೆ ಗುರ್ಜೀತ್ ಸಿಂಗ್ ಹೇಳಿದ್ದಾರೆ. ತಮ್ಮ ಮಗನ ಮೃತದೇಹವನ್ನು ಸ್ವದೇಶಕ್ಕೆ ತರಿಸಿ, ಅಂತ್ಯಕ್ರಿಯೆ ನಡೆಸಲು ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮಂಗಳವಾರ ಮೃತರ ಕುಟುಂಬ ಸದಸ್ಯರನ್ನು ಭೇಟಿಯಾಗಿ, ಗುರ್ಕಿರತ್ ಅವರ ಮೃತದೇಹವನ್ನು ಮನೆಗೆ ತರುವ ಎಲ್ಲಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.