ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಹೃದಯವಿದ್ರಾವಕ ದುರಂತ ಸಂಭವಿಸಿದೆ. ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರು ಕಿರಣ್ (6), ಬಸಮ್ಮ (11), ಶರತ್ (6) ಮತ್ತು ಹಣಮೇಶ್ (7) ಎಂದು ಗುರುತಿಸಲಾಗಿದೆ. ಈ ನಾಲ್ವರೂ ಸ್ನೇಹಿತರು ಆಟವಾಡುತ್ತಾ ಹೊಂಡದ ಬಳಿ ಹೋಗಿದ್ದು, ಬಿಸಿಲಿನ ತಾಪ ತಗ್ಗಿಸಿಕೊಳ್ಳಲು ಈಜಲು ನೀರಿಗೆ ಇಳಿದಿದ್ದರು.
ಆದರೆ ಹೊಂಡದ ನೀರು ಆಳವಾಗಿರುವುದರಿಂದ ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಧಾವಿಸಿ ಮಕ್ಕಳನ್ನು ಹೊರತೆಗೆದರೂ, ಆಗಲೇ ಅವರು ಮೃತಪಟ್ಟಿದ್ದರು. ಈ ದುರ್ಘಟನೆಯಿಂದ ಇಡೀ ಗ್ರಾಮದಲ್ಲಿ ದುಃಖದ ವಾತಾವರಣ ಆವರಿಸಿದೆ. ಪೋಷಕರು ತಮ್ಮ ಮಕ್ಕಳ ಮೃತದೇಹಗಳನ್ನು ತಬ್ಬಿಕೊಂಡು ಆಕ್ರಂದಿಸುತ್ತಿದ್ದಾರೆ. ಕೃಷಿ ಹೊಂಡಗಳನ್ನು ಸುರಕ್ಷಿತವಾಗಿ ನಿರ್ವಹಿಸದಿರುವುದು ಈ ರೀತಿಯ ದುರಂತಗಳಿಗೆ ಕಾರಣವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೊಂಡಗಳ ಸುತ್ತ ಬೇಲಿ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾಹಿತಿಯ ಪ್ರಕಾರ ಮಕ್ಕಳು ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಎಬ್ಬಿಸಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಒಟ್ಟಾರೆ, ಒಂದು ನಿರ್ಲಕ್ಷ್ಯದಿಂದ ನಾಲ್ವರು ಪುಟ್ಟ ಜೀವಗಳು ಕಳೆದುಹೋಗಿದ್ದು, ನಗನೂರು ಗ್ರಾಮದಲ್ಲಿ ಶೋಕಸಮುದ್ರವೇ ಆವರಿಸಿದೆ.