ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹತ್ತಿರವಾಗುತ್ತಿದ್ದಾರೆಯೇ? ಇವತ್ತಿನ ಬೆಳವಣಿಗೆಗಳನ್ನು ನೋಡಿದರೆ ಹೌದು ಅನ್ನಿಸುತ್ತದೆ. ಅತ್ತ ದೆಹಲಿಯಲ್ಲಿಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರ ಜತೆ ಮಾತನಾಡುತ್ತಾ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಇತ್ತ ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ಫೆ. 26ರಂದು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಬರಲು ಸೂಚನೆ ನೀಡಿದೆ ಎಂದು ಹೇಳಿದ್ದಾರೆ.
ಇವತ್ತು ದಹೆಲಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಈ ಚರ್ಚೆ ಬೆನ್ನಲ್ಲೇ ಮಹತ್ವದ ಮಾಹಿತಿಗಳು ಹೊರಬಿದ್ದಿದೆ. ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲದ ವಾತಾವರಣದಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ
ಸಿಎಂ ರೇಸ್ ಕುರಿತು ಗೊಂದಲಕ್ಕೆ ಅಂತ್ಯಹಾಡುವಂತೆ ಸತೀಶ್ ಜಾರಕಿಗೊಳಿ ಮನವಿ ಮಾಡಿಕೊಂಡಾಗ ಖರ್ಗೆ ಅವರು, ನಾವು ಕನ್ಕ್ಲೂಷನ್ಗೆ ಬಂದಿದ್ದೇವೆ. ಗೊಂದಲ ನಿವಾರಣೆಯಾಗಲಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ ಅಂತಿಮವಾಗಿದೆ ಎಂದು ಉತ್ತರಿಸಿದ್ದಾರೆ.
ಇಕ್ಬಾಲ್ ಹುಸೇನ್ ಮಾತನಾಡುತ್ತಾ ನಮ್ಮ ನಾಯಕನಿಗೆ ಒಳ್ಳೆಯದಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಅರ್ಧ ಅವಧಿ ಪೂರ್ಣಗೊಳಿಸಿದ್ದಾರೆ. ಉಳಿದ ಎರಡೂವರೆ ವರ್ಷದ ಅವಧಿಗೆ ಶಿವಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂಬುದು ಎಲ್ಲಾ ಸಚಿವರು ಹಾಗೂ ಶಾಸಕರ ಇಚ್ಛೆಯಾಗಿದೆ ಎಂದಿದ್ದಾರೆ.