ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದು ಕೋಲಾರ ಜಿಲ್ಲೆಯ ರೈತ ಸಂಘದ ಅಧ್ಯಕ್ಷ ಹಾಗೂ ಸಿಪಿಎಂ ಮುಖಂಡ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮುದುವಾಡಿ ಕೆರೆಯಲ್ಲಿ ಈ ದುರಣ್ಯ ಸಂಭವಿಸಿದೆ. ರೈತ ಸಂಘದ ರಾಜ್ಯ ಸಮ್ಮೇಳನದ ಸಿದ್ದತೆ ಮುಗಿಸಿ ವಾಪಸ್ಸಾಗುವಾಗ ಅವಘಡ ಸಂಭವಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಮೃತರು. ಕೆರೆಗೆ ತಡೆಗೋಡೆ ಇಲ್ಲದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಕೋಲಾರ ತಾಲ್ಲೂಕಿನ ತೊರಾಂಡಹಳ್ಳಿ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ಕಾರು ಕೆರೆಗೆ ಬಿದ್ದು ದುರಂತ ಸಂಭವಿಸಿದೆ.
ನಾಳೆಯಿಂದ ಕೋಲಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಪಿಎಂ ಪಕ್ಷ ರಾಜ್ಯ ಸಮಾವೇಶ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಳದ ರಾತ್ರಿ ಒಂದು ಗಂಟೆವರೆಗೂ ಜಿಲ್ಲಾಧ್ಯಕ್ಷ ಕಾಮೆಡ್ ವೆಂಕಟೇಶ್ ಹಾಗೂ ಹಲವು ಕಾರ್ಯಕರ್ತರು ನಗರದಲ್ಲಿ ಬ್ಯಾನರ್, ಬಂಟಿಂಗ್ಸ್ಗಳನ್ನು ಕಟ್ಟಿ ನಂತರ ವೆಂಕಟೇಶ್, ತಮ್ಮ ಇಂಡಿಕಾ ಕಾರಿನಲ್ಲಿ ತಮ್ಮೂರು ತೊರಾಂಡಳ್ಳಿ ಕಡೆಗೆ ಹೊರಟಿದ್ದಾರೆ. ಈ ವೇಳೆ ಮುದುವಾಡಿ ಗ್ರಾಮದ ಬಳಿ ಬರುತ್ತಿರುವಾಗ ತಿರುವಿನಲ್ಲಿ ಕಾರಿಗೆ ಯಾವುದಾದರೂ ವಾಹನ ಡಿಕ್ಕಿ ಹೊಡೆಯಿತೋ ಅಥವಾ ಆಯತಪ್ಪಿತ್ತೋ ಗೊತ್ತಿಲ್ಲ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕಾರು ಕೆರೆಗೆ ಬಿದ್ದಿದೆ. ವೆಂಕಟೇಶ್ ಕಾರಿನಿಂದ ಹೊರಬರಲು ಪ್ರಯತ್ನ ಮಾಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ವೆಂಕಟೇಶ್ ಕಾರಿನಲ್ಲೇ ಮೃತಪಟ್ಟಿದ್ದಾರೆ. ಕಾರು ಅಪಘಾತವಾಗಿ ಕೆರೆಗೆ ಬಿದ್ದಿರುವ ವಿಷಯ ಬೆಳಿಗ್ಗೆ 9 ಗಂಟೆಯವರೆಗೂ ಯಾರಿಗೂ ತಿಳಿದಿಲ್ಲ. ವೆಂಕಟೇಶ್ ರಾತ್ರಿ ಮನೆಗೆ ಬಂದಿಲ್ಲ. ಅವರ ಮೊಬೈಲ್ ಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹುಡುಕಾಡುವ ವೇಳೆ ವೆಂಕಟೇಶ್ ಅವರ ಕಾರಿನ ಮುಂಭಾಗದ ನಂಬರ್ ಪ್ಲೇಟ್ ಇದ್ದ ಮಡ್ ಗಾರ್ಡ್ ಕೆರೆಯ ಕಟ್ಟೆ ಮೇಲೆ ಬದಿಯಲ್ಲಿ ಬಿದ್ದಿತ್ತು, ಅದನ್ನ ನೋಡಿದ ಕೆಲವರು ಕೆರೆಯಲ್ಲಿ ನೋಡಿದ್ದಾರೆ ಕಾರಿನಿಂದ ಡೀಸೆಲ್ ಲೀಕ್ ಆಗುತ್ತಿರುವುದು ಕಂಡುಬಂದಿದೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್ ಶವ ಇರುವುದು ತಿಳಿದು ಬಂದಿದೆ.