ಬೆಂಗಳೂರು ನಗರದ ಅತ್ಯಂತ ಹಳೆಯ ಹಾಗೂ ಸಾಂಪ್ರದಾಯಿಕ ಉತ್ಸವಗಳಲ್ಲಿ ಒಂದಾದ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕರಗದ ಪೌರಾಣಿಕ ಮಹತ್ವ ಮತ್ತು ವೀರಕುಮಾರರ ಆಚರಣೆಗಳ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ನೀಡಿದ ಮಾಹಿತಿಯ ಪ್ರಕಾರ, ಚೈತ್ರ ಪೂರ್ಣಿಮೆಗೆ ಮೂರು ದಿನಗಳ ಮೊದಲು ತಾಯಿ ದ್ರೌಪದಿ ದೇವಿ ಭೂಮಿಗೆ ಆಗಮಿಸುತ್ತಾಳೆ ಎಂಬ ನಂಬಿಕೆ ಇದೆ.
ಪಾಂಡವರ ಸ್ವರ್ಗಾರೋಹಣದ ವೇಳೆ ದ್ರೌಪದಿ ದೇವಿ ಮೂರ್ಛೆ ಹೋದಾಗ, ಅವಳ ಮುಂದೆ ತಿಮಿರಾಸುರ ಎಂಬ ರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ಆ ರಾಕ್ಷಸನ ಸಂಹಾರಕ್ಕಾಗಿ ದ್ರೌಪದಿ ದೇವಿ ತನ್ನ ಶಕ್ತಿಯಿಂದ ‘ವೀರಕುಮಾರರನ್ನು’ ಸೃಷ್ಟಿಸುತ್ತಾಳೆ ಎಂಬ ಪೌರಾಣಿಕ ಕಥೆ ಪ್ರಸಿದ್ಧವಾಗಿದೆ. ರಾಕ್ಷಸ ಸಂಹಾರದ ಬಳಿಕ ಗೋವಿಂದನ ದರ್ಶನ ಪಡೆದ ದ್ರೌಪದಿ ದೇವಿ ಅದೃಶ್ಯಳಾಗುತ್ತಾಳೆ. ತಾಯಿಯ ವಿಯೋಗವನ್ನು ತಡೆಯಲಾಗದೇ ಭಕ್ತಿಭಾವದಲ್ಲಿ ವೀರಕುಮಾರರು ತಮ್ಮ ಎದೆಗೆ ಖಡ್ಗದಿಂದ ಬಡಿದುಕೊಳ್ಳುತ್ತಾರೆ. ಈ ಆಚರಣೆಯನ್ನೇ ‘ಅಲಗು ಸೇವೆ’ ಎಂದು ಕರೆಯಲಾಗುತ್ತದೆ.
ಇದು ತಾಯಿ ನಮ್ಮನ್ನು ಬಿಟ್ಟು ಹೋಗಬೇಡ, ನಮ್ಮನ್ನು ರಕ್ಷಿಸು ಎಂಬ ಭಕ್ತರ ಬೇಡಿಕೆಯ ಸಂಕೇತವಾಗಿದೆ. ಕರಗ ಉತ್ಸವದ 11 ದಿನಗಳ ಅವಧಿಯಲ್ಲಿ ವೀರಕುಮಾರರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ. ಬರಿಗಾಲಿನಲ್ಲಿ ನಡೆದು, ದಿನವಿಡೀ ಉಪವಾಸವಿದ್ದು, ದೇವಸ್ಥಾನದ ಪ್ರಸಾದವನ್ನೇ ಸೇವಿಸುವುದು ಇವರ ಆಚರಣೆ. ಭಕ್ತಿ, ಶಿಸ್ತು ಮತ್ತು ಪರಂಪರೆಯ ಸಂಯೋಜನೆಯೇ ಬೆಂಗಳೂರು ಕರಗದ ವೈಶಿಷ್ಟ್ಯ. ಈ ಬಾರಿ ಕೂಡ ಕರಗ ಉತ್ಸವವು ಭಕ್ತಿಭಾವದ ನಡುವೆ ವಿಜೃಂಭಣೆಯಿಂದ ನಡೆಯುವ ನಿರೀಕ್ಷೆಯಿದೆ.