ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತೋತ್ಸವದ ಅಂಗವಾಗಿ ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠದಲ್ಲಿ ಅದ್ಭುತ ಕಲಾಕೃತಿ ಒಂದು ಮೂಡಿಬಂದಿದೆ. ಶ್ರೀಗಳ ಸ್ಮರಣಾರ್ಥ ಮಠದ ಆವರಣದಲ್ಲಿ ಬರೋಬ್ಬರಿ 8,000 ಚದರ ಅಡಿ ವಿಸ್ತೀರ್ಣದ ಬೃಹತ್ ರಂಗೋಲಿ ನಿರ್ಮಿಸಲಾಗಿದ್ದು, ಇದು ಜಯಂತೋತ್ಸವದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ. ಈ ರಂಗೋಲಿಯಲ್ಲಿ ಶ್ರೀಗಳ ನಗುಮುಖ ಮನಸೆಳೆಯುವಂತೆ ಮೂಡಿಬಂದಿದ್ದು, ಭಕ್ತರಲ್ಲಿ ಭಕ್ತಿ ಭಾವನೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಬಣ್ಣಗಳ ಅದ್ಭುತ ಸಂಯೋಜನೆ, ವಿನ್ಯಾಸದ ನಿಖರತೆ ಮತ್ತು ಆಧ್ಯಾತ್ಮಿಕತೆ ಒಟ್ಟುಗೂಡಿಸಿರುವ ಈ ಕಲಾಕೃತಿ ನೋಡಿದೊಡನೆ ಭಕ್ತರು ಮಂತ್ರಮುಗ್ಧರಾಗುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾವಿರಾರು ಭಕ್ತರು ಈ ರಂಗೋಲಿಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬೃಹತ್ ರಂಗೋಲಿಯನ್ನು ಮೈಸೂರು ಮೂಲದ ‘ಪುನೀತ್ ಕಲಾವಿದ’ ತಂಡ ಸೃಷ್ಟಿಸಿದೆ. ತಂಡದ ಸದಸ್ಯರಾದ ಪುನೀತ್, ಲಕ್ಷ್ಮಿ ಸಿ, ಆದಿತ್ಯ ಪಿ, ಹರ್ಷಿತ್ ಆರ್ ಮತ್ತು ಕುಮಾರಸ್ವಾಮಿ ಕೆ.ಬಿ ಅವರು ಸುಮಾರು ಒಂದು ವಾರ ಹಗಲಿರುಳು ಶ್ರಮಿಸಿ ಈ ಕಲಾಕೃತಿಯನ್ನು ರೂಪಿಸಿದ್ದಾರೆ.
ಸಮಾಜಸೇವೆ ಮತ್ತು ದಾನಧರ್ಮದ ಪ್ರತೀಕವಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶಗಳನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ಈ ರಂಗೋಲಿಯನ್ನು ನಿರ್ಮಿಸಲಾಗಿದೆ ಎಂದು ಕಲಾತಂಡ ತಿಳಿಸಿದೆ. ಒಟ್ಟಿನಲ್ಲಿ, ಸಿದ್ಧಗಂಗಾ ಮಠದ ಆವರಣವು ಈಗ ಆಧ್ಯಾತ್ಮಿಕ ಕೇಂದ್ರವಾಗಿರುವುದರ ಜೊತೆಗೆ ಕಲಾ ಸಂಭ್ರಮದ ತಾಣವಾಗಿಯೂ ಭಕ್ತರನ್ನು ಸೆಳೆಯುತ್ತಿದೆ.