ಬಳ್ಳಾರಿ: 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನದೇ ತರಗತಿಯ ಮತ್ತೊಬ್ಬ ಸಹಪಾಠಿಯನ್ನು ಹತ್ಯೆ ಆಡಿರುವ ಭೀಕರ ಘಟನೆ ಬಳ್ಳಾರಿಯ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಸಮ್ಮತಗೇರಿ ಗ್ರಾಮದ ಡಿ.ಹೇಮಂತ್ ಮೃತಪಟ್ಟ ದುರ್ದೈವಿ ಬಾಲಕ.
ಒಂಬತ್ತನೇ ತರಗತಿ ವಿದ್ಯಾರ್ಥಿ, ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಸಮ್ಮತಗೇರಿ ಗ್ರಾಮದ ಡಿ.ಹೇಮಂತ್ ಮೃತಪಟ್ಟ ಬಾಲಕ. ದಾಳಿ ಮಾಡಿದ್ದು ಬಳ್ಳಾರಿಯ ಗೋನಾಳು ಗ್ರಾಮದ ಬಾಲಕ ಎಂದು ತಿಳಿದು ಬಂದಿದೆ.
ಈ ಬಾಲಕ ತನ್ನ ಸಹಪಾಠಿಗಳ ಮೇಲೆ ರಾಡ್, ಚಾಕು, ತೆಂಗಿನಕಾಯಿ ಸುಲಿಯುವ ಸಾಧನದಿಂದ ತೀವ್ರವಾಗಿ ದಾಳಿ ನಡೆಸಿದ್ದಾನೆ. ಇದರಿಂದ ಒಬ್ಬ ವಿದ್ಯಾರ್ಥಿ ಮೃತಪಟ್ಟು, ಬಾಲಕಿ ಸೇರಿ ಏಳು ಮಕ್ಕಳು ಗಾಯಗೊಂಡಿದ್ದಾರೆ. ಘಟನೆ ನಡೆದ ನಂತರ ಬಾಲಕ ಪರಾರಿಯಾಗಿದ್ದಾನೆ.
ನಡೆದಿದ್ದು ಏನು?
ಹಾಸ್ಟೆಲ್ನಲ್ಲಿ ಶನಿವಾರ ರಾತ್ರಿ ಎಲ್ಲರೂ ಊಟ ಮುಗಿಸಿದ್ದರು. ಆರೋಪಿ ಬಾಲಕ, ಹೇಮಂತ್ ಮತ್ತು ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು ಒಂದೇ ಕೋಣೆಯಲ್ಲಿ ಮಲಗಿದ್ದರು. ಈ ಬಾಲಕ ರಾತ್ರಿ 10.15ರ ವೇಳೆಗೆ ಏಕಾಏಕಿ ದಾಳಿ ನಡೆಸಿದ್ದಾನೆ. ಅಡ್ಡ ಬಂದ ವಾರ್ಡನ್ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ವಸತಿ ನಿಲಯದ ಒಳಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇರಲಿಲ್ಲ. ಹೀಗಾಗಿ ಘಟನೆಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಆರೋಪಿ ಪರಾರಿಯಾಗುತ್ತಿರುವುದು ಬೇರೊಂದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಹೇಮಂತ್ ತಂದೆ ಲಕ್ಷ್ಮೀಕಾಂತ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆರೋಪಿ ಬಾಲಕ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 ವರ್ಷದ ಬಾಲಕನೊಬ್ಬ ಈ ರೀತಿ ದಾಳಿ ನಡೆಸಬೇಕೆಂದರೆ ಬಹುಶಃ ಆತ ಮಾದಕವಸ್ತು ವ್ಯಸನಿಯಾಗಿರಬಹುದು ಎಂಬ ಶಂಕಿಸಲಾಗಿದೆ. ಈ ಮಧ್ಯೆ ವಸತಿ ಶಾಲೆಗೆ ಇಲಾಖೆ ಅನುಮತಿ ಕೊಟ್ಟಿಲ್ಲ ಎಂದು ಡಿಡಿಪಿಐ ಉಮಾದೇವಿ ತಿಳಿಸಿದ್ದಾರೆ.