ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 40 ಸಾವಿರ ಹುದ್ದೆ ಭರ್ತಿ ಮಾಡಿದ್ದಾಗಿ ಹೇಳುತ್ತಾರೆ. ಇಷ್ಟು ಪ್ರಮಾಣದ ಹುದ್ದೆಗಳನ್ನು ಎಲ್ಲಿ ಭರ್ತಿ ಮಾಡಲಾಗಿದೆ ಎಂದು ಇಲಾಖಾವಾರು ಲೆಕ್ಕ ಕೊಡಿ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.
ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ಸರಕಾರ ರಚಿಸಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲ ಹುದ್ದೆ ಭರ್ತಿ ಮಾಡುವುದಾಗಿ ತಿಳಿಸಿದ್ದರು. ಈಗ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. 40 ಸಾವಿರ ಹುದ್ದೆ ಭರ್ತಿ ಮಾಡಿದ್ದಾಗಿ ಸಿದ್ದರಾಮಯ್ಯನವರು ಹೇಳುತ್ತಾರೆ. ಯಾವ್ಯಾವ ಹುದ್ದೆ ಭರ್ತಿ ಮಾಡಿದ್ದೀರೆಂದು ಇಲಾಖಾವಾರು ಲೆಕ್ಕ ಕೊಡಿ ಎಂದು ಸವಾಲು ಹಾಕಿದರು. ಸುಮ್ಮನೇ ಸುಳ್ಳು ಹೇಳುವುದೇ ಈ ಸರಕಾರದ ಜಾಯಮಾನ. ಯುವಕರಿಗೆ ಅನ್ಯಾಯ ಮಾಡುವ ಈ ಸರಕಾರದ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಛತ್ತೀಸ್ಗಡ, ಜಾರ್ಖಂಡ್ನಲ್ಲಿ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿ ತೆಲಂಗಾಣದಲ್ಲಿ ನೇಮಕಾತಿ ನಡೆಯುತ್ತಿದೆ. ಕರ್ನಾಟಕದಲ್ಲಿ ಶೇ 56 ಕ್ಕೆ ನೇಮಕಾತಿ ಮಾಡುವುದಾಗಿ ಹೇಳಿ, ಇಷ್ಟು ವರ್ಷ ಎಲ್ಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು, ಎಸ್ಸಿ, ಎಸ್ಟಿ ಯುವಕರಿಗೆ ಆಸೆ ತೋರಿಸಿ, ಈಗ ಶೇ 50ಕ್ಕೇ ನೇಮಕ ಮಾಡುವುದಾಗಿ ಹೇಳಿದ್ದೀರಲ್ಲವೇ? ಇದು ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಾಡುವ ಘೋರ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಕೋರ್ಟಿನಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ:
ಈ ಸರಕಾರವು ಕೋರ್ಟಿನಲ್ಲಿ ಸರಿಯಾಗಿ ವಾದ ಮಂಡಿಸಿಲ್ಲ ಎಂದು ಅವರು ಟೀಕಿಸಿದರು. ಶೇ 56 ಮೀಸಲಾತಿಯಡಿ ನಾವು ಹುದ್ದೆ ಭರ್ತಿ ಮಾಡುವುದಾಗಿ ಕೋರ್ಟಿನಲ್ಲಿ ಸಮರ್ಪಕ ವಾದ ಮಂಡಿಸಿಲ್ಲ. ಎಸ್ಸಿ, ಎಸ್ಟಿಗಳ 39 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಉಪಯೋಗಿಸಿದ್ದಾರೆ. ಇದು ಈ ಸರಕಾರವು ಎಸ್ಸಿ, ಎಸ್ಟಿಗಳಿಗೆ ಅನ್ಯಾಯ ಮಾಡಿದ್ದಲ್ಲವೇ ಎಂದು ಕೇಳಿದರು.