ಬೆಂಗಳೂರು: ಸರ್ವರಿಗೂ ಸಮಪಾಲು ಎಂದು ಹೇಳುವ ಕಾಂಗ್ರೆಸ್ ಮುಸ್ಲಿಮರಿಗೆ ಮಾತ್ರ ವಿಶೇಷ ಅನುದಾನ ನೀಡುತ್ತಿದೆ. ಇದರ ಜೊತೆಗೆ ದಲಿತರು ಹಾಗೂ ಹಿಂದುಳಿದ ವರ್ಗಕ್ಕೂ ನೀಡಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಮುಸ್ಲಿಮರು ತಿರುಗಿಬಿದ್ದು ಮುಖಂಡರ ವಿರುದ್ಧ ಕ್ರಮ ಕೈಗೊಂಡಿರುವುದರಿಂದ ಮತ ಬ್ಯಾಂಕ್ ರಾಜಕಾರಣ ಮಾಡಲಾಗಿದೆ. ಇದಕ್ಕೆ ಹಿಂದೂಗಳು ತಿರುಗುಬಾಣ ನೀಡಲಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ನ ಮೂರನೇ ಬಾಗಿಲಿಗೆ ಶಂಕುಸ್ಥಾಪನೆಯ ಪೂಜೆ ಮಾಡಿದ್ದಾರೆ. ಈ ಮೂಲಕ ಅವರು ಸಿಎಂ ಆಗುವ ಚರ್ಚೆ ಶುರುವಾಗಿದೆ. ಇದುವರೆಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅಭಿಪ್ರಾಯವಿತ್ತು. ಈಗ ಎಲ್ಲರೂ ಖರ್ಗೆ ಕಡೆಗೆ ತಿರುಗಿ ನೋಡುತ್ತಿದ್ದಾರೆ. ನಮಗೆ ಸಿಎಂ ಬದಲಾವಣೆಗಿಂತಲೂ ಸರ್ಕಾರ ಬಿದ್ದುಹೋಗುವುದು ಸೂಕ್ತ ಎಂಬ ಅಭಿಪ್ರಾಯವಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಟ ನೋಡಿಯಾಗಿದೆ. ಅದೇ ರೀತಿ ಹೊಸ ಪಿಕ್ಚರ್ ಬಂದರೂ ನೋಡುತ್ತೇವೆ. ಖರ್ಗೆ ಸಿಎಂ ಆದರೂ ಬಳಿಕ ಜನರು ಗೇಟ್ಪಾಸ್ ನೀಡುವುದು ಖಚಿತ ಎಂದರು.
ಹೈಕಮಾಂಡ್ ತಿರಸ್ಕಾರ ಮಾಡಿದ ನಂತರ ಡಿ.ಕೆ.ಶಿವಕುಮಾರ್ಗೆ ಬೇರೆ ದಾರಿಯೇ ಇಲ್ಲ. ತಲೆಬಾಗಿ ಅಲ್ಲ, ಮಂಡಿಯೂರಿ ತೆವಳಿಕೊಂಡು ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯನ್ನು ಸ್ವೀಕಾರ ಮಾಡಬೇಕಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಏನೇನು ಕಿಲಾಡಿ ಆಟ ಆಡುತ್ತಾರೋ ನೋಡೋಣ ಎಂದರು.
ಇರಾನ್ ಹಾಗೂ ಅಮೆರಿಕದ ನಡುವಿನ ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಲೆಯನ್ನು ಇಳಿಕೆ ಮಾಡಲು ಕ್ರಮ ವಹಿಸಬಹುದು. ಯುದ್ಧ ನಿಂತ ಕೂಡಲೇ ಈ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ ಎಂದರು.