ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯಪಾನ ಸೇವಿಸಿ ವಿಧಾನಸಭೆಗೆ ಹಾಜರಾಗಿದ್ದಾರಾ ಎಂಬ ಬಗ್ಗೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಇಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ಕರೆದಿದ್ದ ವಿಶೇಷ ಅಧಿವೇಶನಕ್ಕೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕುಡಿದು ಸದನಕ್ಕೆ ಹಾಜರಾಗಿದ್ದಾರೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾಗ ಅವರ ವರ್ತನೆ ಕುಡಿದವರ ರೀತಿ ಇತ್ತು ಅಸಹಜವಾಗಿತ್ತು ಎಂದು ಕಾಂಗ್ರೆಸ್ ನಾಯಕರು ಆಪಾದಿಸಿದ್ದಾರೆ.
ಪ್ರತಿಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಸದನದ ಎಲ್ಲಾ ಶಾಸಕರಿಗೂ ತಕ್ಷಣವೇ ಮದ್ಯಪಾನ ಪರೀಕ್ಷೆ ನಡೆಸಬೇಕು ಎಂದು ಆಗ್ರಹಪಡಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಬಂಧ ಕಾಂಗ್ರೆಸ್ ಶಾಸಕರು ಸದನದಿಂದ ಹೊರನಡೆದರು.
ಇತ್ತೀಚೆಗಷ್ಟೇ ಆಪ್ ತೊರೆದು ಬಿಜೆಪಿ ಸೇರಿರುವ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರು ಸಿಎಂ ಮಾನ್ ಸದನದಲ್ಲಿ ಮಾತನಾಡುತ್ತಿರುವ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಇಂದು ಮತ್ತೆ ಪಂಜಾಬ್ ಸಿಎಂ ಮದ್ಯದ ಅಮಲಿನಲ್ಲಿ ವಿಧಾನಸಭೆಗೆ ಬಂದಿದ್ದಾರೆ. ಈ ವ್ಯಕ್ತಿ ಗುರುದ್ವಾರ, ದೇವಾಲಯ ಮತ್ತು ಸರ್ಕಾರಿ ಸಭೆಗಳಿಗೂ ಕುಡಿದೇ ಹೋಗುತ್ತಾರೆ. ಈ ಹಿಂದೆ ವಿದೇಶ ಪ್ರವಾಸದ ವೇಳೆ ವಿಮಾನದಿಂದ ಕೆಳಗೆ ಇಳಿಯಲಾಗದಷ್ಟು ಕುಡಿದಿದ್ದರು ಎಂದು ಹೇಳಿದ್ದಾರೆ.
ಶಿರೋಮಣಿ ಅಕಾಲಿದಳ ಕೂಡ ಮುಖ್ಯಮಂತ್ರಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದು, ಕಾರ್ಮಿಕ ದಿನದಂದು ವಿಧಾನಸಭೆಗೆ ಮದ್ಯಪಾನ ಮಾಡಿ ಬಂದಿರುವುದು ನಾಚಿಕೆಗೇಡಿನ ಸಂಗತಿ. ಪಂಜಾಬ್ ಜನತೆಗೆ ಸತ್ಯ ತಿಳಿಯಲು ಮುಖ್ಯಮಂತ್ರಿಗಳು ಮತ್ತು ಆಪ್ನ ಎಲ್ಲಾ ಶಾಸಕರಿಗೆ ಮದ್ಯಪಾನ ಟೆಸ್ಟ್ ಮಾಡಿಸಬೇಕು ಒತ್ತಾಯಿಸಿದೆ.
ಪಂಜಾಬ್ ಆಪ್ ಅಧ್ಯಕ್ಷ ಹಾಗೂ ಸಚಿವ ಅಮನ್ ಅರೋರಾ, ವಿಪಕ್ಷಗಳ ಆಪಾದನೆ ಆಧಾರರಹಿತ ಮತ್ತು ಕ್ಷುಲ್ಲಕ ಎಂದು ತಿರುಗೇಟು ನೀಡಿದ್ದಾರೆ.