ದೇಶದ ಪ್ರಧಾನಿಯೆಂದರೆ ಬಿಡುವಿಲ್ಲದ ಕೆಲಸ, ಒತ್ತಡದ ನಡುವೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಯೊಬ್ಬ ಕಳುಹಿಸಿದ ಮದುವೆ ಆಹ್ವಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ಸ್ಪಂದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ನಿವಾಸಿ ರಾಜೇಶ್ ನಾಯಕ್ ಎಂಬುವವರು ತಮ್ಮ ಮದುವೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿ ದೆಹಲಿಯ ಪ್ರಧಾನಿ ಕಚೇರಿಗೆ ಪತ್ರ ಕಳುಹಿಸಿದ್ದರು. ರಾಜೇಶ್ ಅವರ ಮದುವೆ ಏಪ್ರಿಲ್ 13ರಂದು ಸವಿತಾ ಎಂಬುವವರೊಂದಿಗೆ ನೆರವೇರಿತ್ತು.
ಸಾಮಾನ್ಯ ಪ್ರಜೆಯ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ನವಜೋಡಿಗೆ ಶುಭಾಶಯ ಪತ್ರವನ್ನು ಕಳುಹಿಸಿದ್ದಾರೆ. ಪತ್ರದಲ್ಲಿ, "ನಿಮ್ಮ ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ" ಎಂದು ಹಾರೈಸಿದ್ದಾರೆ. ಅಲ್ಲದೆ, ಪರಸ್ಪರರ ಗೌರವ ಮತ್ತು ಪ್ರೀತಿಯಿಂದ ಆದರ್ಶ ದಂಪತಿಗಳಾಗಿ ಬಾಳುವಂತೆ ಕಿವಿಮಾತು ಹೇಳಿದ್ದಾರೆ.
ತಮ್ಮ ಪತ್ರಕ್ಕೆ ಪ್ರಧಾನಿಯವರಿಂದ ಉತ್ತರ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ರಾಜೇಶ್ ನಾಯಕ್ ಅಚ್ಚರಿ ವ್ಯಕ್ತಪಡಿಸಿದ್ದು, ಪ್ರಧಾನಿಯವರ ಈ ನಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೆಹಲಿಯಿಂದ ಬಂದ ಈ ಶುಭಾಶಯ ಪತ್ರವು ಸದ್ಯ ಕಾನಿಹಾಳ ಗ್ರಾಮದ ನವಜೋಡಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.