ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಈ ವಿವಾದದ ಬೆನ್ನಲ್ಲೇ, ಇನ್ನು ಮುಂದೆ ಆ ಕಾಲೇಜಿನಲ್ಲಿ ಯಾವುದೇ ಸರ್ಕಾರಿ ಪರೀಕ್ಷೆಗಳನ್ನು ನಡೆಸದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.ಏಪ್ರಿಲ್ 23ರಂದು ನಡೆದ ಸಿಇಟಿ ಭೌತಶಾಸ್ತ್ರ ಪರೀಕ್ಷೆ ವೇಳೆ, ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ ಜನಿವಾರ ತೆಗೆಯುವಂತೆ ಒತ್ತಾಯಿಸಿದ್ದರು. ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕಾಲೇಜಿನ ಪರವಾನಗಿ ರದ್ದುಪಡಿಸಬೇಕು ಮತ್ತು ದಂಡ ವಿಧಿಸಬೇಕೆಂದು ಸಿಎಂ ಅವರಿಗೆ ದೂರು ನೀಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿ ಜಗದೀಶ್, "ಪರೀಕ್ಷಾರ್ಥಿಗಳ ಜನಿವಾರವನ್ನು ಉದ್ದೇಶಪೂರ್ವಕವಾಗಿ ತೆಗೆಸಲಾಗಿದೆ. ವಸ್ತ್ರಸಂಹಿತೆಯ ಬಗ್ಗೆ ಸ್ಪಷ್ಟ ತರಬೇತಿ ನೀಡಿದ್ದರೂ, ಈ ಕೃತ್ಯ ಎಸಗಿರುವುದು ಕರ್ತವ್ಯ ಲೋಪವಾಗಿದೆ. ಹೀಗಾಗಿ, ಕೃಪಾನಿಧಿ ಕಾಲೇಜಿನಲ್ಲಿ ಇನ್ನು ಮುಂದೆ ಪರೀಕ್ಷಾ ಕೇಂದ್ರ ನೀಡದಂತೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಧಾರ್ಮಿಕ ಚಿಹ್ನೆಗಳಿಗೆ ಧಕ್ಕೆ ತಂದ ಈ ಘಟನೆ, ಇದೀಗ ಆ ಕಾಲೇಜಿಗೆ ಮುಳುವಾಗಿ ಪರಿಣಮಿಸಿದೆ.