ಹುಬ್ಬಳ್ಳಿ:ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಹುಬ್ಬಳ್ಳಿಯಲ್ಲಿ ‘ಬೃಹತ್ ಜನಾಕ್ರೋಶ ಮಹಿಳಾ ಪ್ರತಿಭಟನಾ ಸಭೆ’ ಹಮ್ಮಿಕೊಂಡಿತ್ತು.
ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ, ಲೋಕಸಭಾ ಸ್ಥಾನಗಳ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುವುದಿಲ್ಲ. ಈ ರಾಜ್ಯಗಳಿಗೆ ಶೇ 50 ಹೆಚ್ಚುವರಿ ಸೀಟು ಲಭಿಸಲಿದೆ. ಆದರೆ, ಈ ಕುರಿತಂತೆ ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಇಂಡಿ ಒಕ್ಕೂಟ, ಕರ್ನಾಟಕದ ಕಾಂಗ್ರೆಸ್, ತಮಿಳುನಾಡಿನ ಡಿಎಂಕೆ, ಕೇರಳದ ಕಮ್ಯುನಿಸ್ಟ್ ಪಕ್ಷ, ಯುಡಿಎಫ್ ನವರು ದೇಶ ವಿಭಜನೆ ಮಾಡಲು ಹೊರಟವರು. ಇವರು ತುಕ್ಡೇ ತುಕ್ಡೆ ಗ್ಯಾಂಗಿನವರು ಎಂದು ಆಕ್ಷೇಪಿಸಿದರು. ಈ ಷಡ್ಯಂತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹಿಳಾ ಮೀಸಲಾತಿ ಕೆಲಸ ಆಗಬೇಕಿದ್ದರೆ ನಾವೆಲ್ಲರೂ ಮನೆಮನೆಗೆ ತೆರಳಿ ವಿರೋಧ ಮಾಡಿದ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷದವರನ್ನು ಕಟೆಕಟೆಯಲ್ಲಿ ನಿಲ್ಲಿಸಬೇಕು ಎಂದರು.
ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗಿದೆ. ಲವ್ ಜಿಹಾದ್ ಪ್ರತಿನಿತ್ಯ ನಡೆಯುತ್ತಿದೆ ಎಂದು ಟೀಕಿಸಿದರು. ಭಯದ ವಾತಾವರಣದಲ್ಲಿ ಹೆಣ್ಮಕ್ಕಳು ಬದುಕುವಂತಾಗಿದೆ. ಈ ಅನೀತಿ, ಅತ್ಯಾಚಾರದ ವಿರುದ್ಧ ಮಹಿಳಾ ಶಕ್ತಿ ಧ್ವನಿ ಎತ್ತಲು ಅವರಿಗೆ ಮೀಸಲಾತಿ ನೀಡಬೇಕಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ಮೋದಿ ಆದ್ಯತೆ ಕೊಟ್ಟವರು ಎಂದು ತಿಳಿಸಿದರು.