ಬೆಂಗಳೂರು: ರಾಜಕಾರಣದಲ್ಲಿ ಐದು ದಶಕ ಪೂರೈಸಿದ ಹಿರಿಯ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಇಂದು ಭೇಟಿ ನೀಡಿದ್ದರು. ಈ ಸಮಯದಲ್ಲಿ ಸಂತೋಷ್ ಅವರು ಭೇಟಿ ನೀಡಿ, ಅವರ ಜತೆಗೆ ಉಪಾಹಾರ ಸೇವಿಸಿದರು.
ಇಬ್ಬರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಸಂಘಟಿಸುತ್ತಿರುವ ಸಂತೋಷ್ ಅವರು ನನ್ನ ನಿವಾಸಕ್ಕೆ ಭೇಟಿ ನೀಡಿದ್ದು ಖುಷಿ ತಂದಿದೆ. ಅವರ ಸಂಘಟನಾ ಸಾಮರ್ಥ್ಯ ಚತುರತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪ್ರೇರೇಪಣೆ ನೀಡುತ್ತದೆ. ಇದೇ ಸಂದರ್ಭದಲ್ಲಿ ಅವರು ನನ್ನ ರಾಜಕೀಯ ಜೀವನದ 50ನೇ ವರ್ಷದ ಪಯಣಕ್ಕೆ ಶುಭ ಕೋರಿದರು ಎಂದರು.
ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಸದೃಢವಾಗಿದ್ದು, ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು ಎಂದು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮೇ 9ರಂದು ಬಿಜೆಪಿ 'ಯಡಿಯೂರಪ್ಪ ಅಭಿಮಾನೋತ್ಸವ' ಸಮಾವೇಶ ನಡೆಯಲಿದೆ. ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 10 ಲಕ್ಷ ಜನತೆ ಸೇರುವ ನಿರೀಕ್ಷೆ ಇದೆ.